ದಾವಣಗೆರೆ: ಭದ್ರಾ ಡ್ಯಾಂ ನೀರು ನಂಬಿಕೊಂಡು ದಾವಣಗೆರೆ ಜಿಲ್ಲೆಯ ಶೇಕಡಾ 70ರಷ್ಟು ಬೆಳೆ ಬೆಳೆಯುತ್ತಾರೆ. ಅಡಿಕೆ, ಮೆಕ್ಕೆಜೋಳ, ಭತ್ತ ಸೇರಿದಂತೆ ಇತರೆ ಬೆಳೆಗಳಿಗೆ ಇದೇ ನೀರೇ ಆಧಾರ. ಆದರೆ ಭದ್ರಾ ಅಚ್ಚುಕಟ್ಟುದಾರ ರೈತರ ತಲೆಮೇಲೆ ಕೈಹೊತ್ತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಇದಕ್ಕೆ ಪ್ರಮುಖ ಕಾರಣ ಭದ್ರಾ ಜಲಾಶಯದಿಂದ ನೀರು ಹರಿಸದೇ ಇರುವುದು. ಭದ್ರಾ ಡ್ಯಾಂ 178 ಅಡಿ ದಾಟಿದ್ದರೂ ನೀರು ಹರಿಸದಿರುವ ಕಾಡಾ ನಿರ್ಧಾರಕ್ಕೆ ದಾವಣಗೆರೆ ಜಿಲ್ಲೆಯ ರೈತರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಭದ್ರಾ ಡ್ಯಾಂ 160 ಅಡಿ ತಲುಪಿದ್ದಾಗಲೂ ಮುಂಗಾರು ಬೆಳೆ ಬೆಳೆಯಲು ನೀರು ಹರಿಸಲಾಗಿತ್ತು. ಈಗ ಇಷ್ಟೊಂದು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದರೂ ನೀರು ಹರಿಸದಿರುವ ಕ್ರಮ ರೈತರ ಕಣ್ಣು ಕೆಂಪಾಗುವಂತೆ ಮಾಡಿದೆ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಈಗ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಹರಿಹರ ಶಾಖಾ ನಾಲಾ ಉಪ ವಿಭಾಗವು ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ.
ಏನಿದೆ ಆದೇಶದಲ್ಲಿ?
ಭದ್ರಾ ಡ್ಯಾಂ ನೀರು ಆಶ್ರಯಿಸಿ ಬೆಳೆ ಬೆಳೆಯುವುದು ಸರಿಯಷ್ಟೇ. ಆದರೆ ಈ ಬಾರಿ ಮಳೆ ಭಾರೀ ಕೊರತೆ ಎದುರಾಗಿದೆ. ಬರಗಾಲ ಸನ್ನಿವೇಶ ಸೃಷ್ಟಿಯಾಗಿದೆ. ಆದಕಾರಣ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗದಿರುವುದರಿಂದ,
ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ನಾಲೆಗಳಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಆದೇಶದಲ್ಲಿ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರದ ಪ್ರಸ್ತುತ ಆದೇಶದಂತೆ, ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಕುಡಿಯಲು ಮಾತ್ರ ನೀರು ಬಳಸಲು ನಿರ್ಧರಿಸಲಾಗಿದೆ.
ರೈತರೇ ಸಹಕರಿಸಿ:
ಮಳೆಗಾಲ ಇನ್ನೂ ಇದೆ. ಮುಗಿದಿಲ್ಲ. ಮುಂದೆ ಮಳೆ ಉತ್ತಮವಾಗಿ ಸುರಿಯುವ ಸಾಧ್ಯತೆ ಇದೆ. ಭದ್ರಾ ಡ್ಯಾಂ ಭರ್ತಿಯಾದಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಸಿ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ಮುಂದಿನ ತೀರ್ಮಾನ
ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.
ಅಲ್ಲಿಯವರೆಗೆ ಹರಿಹರ ಉಪವಿಭಾಗದ ವ್ಯಾಪ್ತಿಗೆ ಬರುವ ಹರಿಹರ ಶಾಖಾ ನಾಲೆಯ 10ನೇ ರೂಪ್, 12ಎ, 12ಬಿ, ಹರಿಹರ ಶಾಖಾ ಮುಖ್ಯ ಕಾಲುವೆ ಹಾಗೂ 13ನೇ ರೂಪ್ ನಾಲೆಗಳ ರೈತ ಬಾಂಧವರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು
ಸಹಾಯಕ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.
Leave a comment