ದಾವಣಗೆರೆ: ಮೆದಗಿನಕೆರೆ ಗ್ರಾಮದ ಪೆಟ್ರೋಲ್ ಬಂಕ್ನಲ್ಲಿ ಶನಿವಾರ ಸಂಜೆ ಒಂದು ವಿಚಿತ್ರ ಘಟನೆ ನಡೆದಿದೆ. ಒಂದೇ ಬೈಕ್ನಲ್ಲಿ ಬಂದ ಮೂವರು ವ್ಯಕ್ತಿಗಳು ವಿಷ ಸೇವನೆಯ ನಾಟಕವಾಡಿ, ಬಂಕ್ ಸಿಬ್ಬಂದಿಯಿಂದ 5,000 ರೂ. ಹಣವನ್ನು ಲಪಟಾಯಿಸಿ ಪರಾರಿಯಾದ ಘಟನೆ ನಡೆದಿದೆ.
ಖದೀಮರ ನಾಟಕಕ್ಕೆ ಮರುಳಾದ ಪೆಟ್ರೋಲ್ ಬಂಕ್ ಸಿಬ್ಬಂದಿ
ಜಗಳೂರು ತಾಲ್ಲೂಕಿನ ಮೆದಗಿನಕೆರೆ ಗ್ರಾಮದ ಎಂ.ಎಚ್. ಮಂಜುನಾಥ್ ಎಂಬುವವರ ಪೆಟ್ರೋಲ್ ಬಂಕ್ಗೆ ಪೆಟ್ರೋಲ್ ತುಂಬಿಸಿಕೊಳ್ಳುವ ನೆಪದಲ್ಲಿ ಮೂವರು ವ್ಯಕ್ತಿಗಳು ಬಂದಿದ್ದಾರೆ. ಅವರಲ್ಲಿ ಒಬ್ಬ ವಿಷ ಸೇವಿಸಿದಂತೆ ನಟಿಸಿದ್ದಾನೆ. “ಬೇಗ ಪೆಟ್ರೋಲ್ ತುಂಬಿಸಿ” ಎಂದು ಕೇಳಿಕೊಂಡು, ಪೆಟ್ರೋಲ್ ತುಂಬಿಸಿಕೊಂಡ ನಂತರ, ಬೈಕ್ನ ಮಧ್ಯದಲ್ಲಿ ಕುಳಿತಿದ್ದ ವ್ಯಕ್ತಿಯ ಬಾಯಿಂದ ವಿಷದ ನೊರೆ ಬರುತ್ತಿರುವಂತೆ ನಾಟಕವಾಡಿದ್ದಾರೆ.
“ತುರ್ತಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಬೇಕು, ನಮ್ಮ ಬಳಿ ನಗದು ಹಣ ಇಲ್ಲ. 5,000 ರೂ. ಫೋನ್ ಪೇ ಮೂಲಕ ಕಳುಹಿಸುತ್ತೇವೆ, ದಯವಿಟ್ಟು ನಗದು ಹಣ ನೀಡಿ” ಎಂದು ಬಂಕ್ ಸಿಬ್ಬಂದಿಗೆ ಮನವೊಲಿಸಿದ್ದಾರೆ.
ಗಾಬರಿಗೊಂಡ ಸಿಬ್ಬಂದಿ, 5,000 ರೂ. ನಗದು ಹಣವನ್ನು ಬೈಕ್ನ ಹಿಂದೆ ಕುಳಿತಿದ್ದ ವ್ಯಕ್ತಿಗೆ ನೀಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಮೊಬೈಲ್ ತೆಗೆದು ಸ್ಕ್ಯಾನ್ ಮಾಡುವಂತೆ ತೋರಿಸಿ, ಫೋನ್ ಪೇ ಮೂಲಕ ಹಣ ಕಳುಹಿಸಿದಂತೆ ನಾಟಕವಾಡಿದ್ದಾರೆ. ತಕ್ಷಣ ಬೈಕ್ ಸ್ಟಾರ್ಟ್ ಮಾಡಿ, ವೇಗವಾಗಿ ಚಾಲನೆ ಮಾಡಿಕೊಂಡು ಮೂವರೂ ಪರಾರಿಯಾಗಿದ್ದಾರೆ. ದೂರದಿಂದಲೇ “ಫೋನ್ ಪೇ ಮಾಡಿದ್ದೇವೆ” ಎಂದು ಕೂಗುತ್ತಾ ಸಿಬ್ಬಂದಿಯನ್ನು ಮೋಸಗೊಳಿಸಿದ್ದಾರೆ.
ಕೆಲವು ಸಮಯದ ನಂತರ, ಹಣ ಬಂದಿಲ್ಲವೆಂದು ತಿಳಿದ ಸಿಬ್ಬಂದಿ, ಬಂಕ್ ಮಾಲೀಕ ಎಂ.ಎಚ್. ಮಂಜುನಾಥ್ರವರಿಗೆ ಮಾಹಿತಿ ನೀಡಿದ್ದಾರೆ. ಇದೇ ದಿನ ಮಧ್ಯಾಹ್ನ 1:30ರ ಸುಮಾರಿಗೆ, ಇದೇ ಮೂವರು ವ್ಯಕ್ತಿಗಳು ಕಾನಾಮಡುಗಿನ ಆಲೂರು ಗೇಟ್ ಬಳಿಯ ಮತ್ತೊಂದು ಪೆಟ್ರೋಲ್ ಬಂಕ್ನಲ್ಲಿ ಇದೇ ರೀತಿಯ ನಾಟಕವಾಡಿ ಹಣ ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆಯ ದೃಶ್ಯಗಳು ಪೆಟ್ರೋಲ್ ಬಂಕ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಮಾಲೀಕ ಎಂ.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮತ್ತು ತನಿಖೆ ನಡೆಯುತ್ತಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228