ದಾವಣಗೆರೆ: ಅದು ಬೆಳ್ಳಂಬೆಳಿಗ್ಗೆಯ ಸಮಯ. ಮನೆಯವರೆಲ್ಲರೂ ನಿದ್ರೆ ಮಂಪರಿನಲ್ಲಿದ್ದರು. ಆದರೆ ಇದ್ದಕ್ಕಿದ್ದಂತೆ ಶಬ್ಧವೊಂದು ಜೋರಾಗಿ ಕೇಳಿ ಬಂತು. ಕೆಳಗೆ ಬಂದು ನೋಡಿದರೆ ಫ್ರಿಡ್ಜ್ ನಲ್ಲಿ ಬೆಂಕಿ. ನೋಡನೋಡುತ್ತಿದ್ದಂತೆ
ಬೆಂಕಿ ಕೆನ್ನಾಲಗೆ ಆವರಿಸಲು ಶುರು ಮಾಡಿತು. ಕೂಡಲೇ ಎಚ್ಚೆತ್ತುಕೊಂಡ ಮನೆಯ ಮಾಲೀಕ ಮನೆಯಲ್ಲಿದ್ದವರನ್ನೆಲ್ಲಾ ನಿದ್ರೆಯಿಂದ ಎದ್ದೇಳಿಸಿ ಪ್ರಾಣ ಉಳಿಸಿದ ರೋಚಕ ಘಟನೆ ಇದು.
ಹೌದು. ದಾವಣಗೆರೆ ನಗರದ ಎಸ್. ಎಸ್. ಬಡಾವಣೆಯ ಬಸವೇಶ್ವರ ನಗರದಲ್ಲಿ ನಡೆದಿದೆ ಈ ಘಟನೆ. ಬೆಂಕಿ ಕೆನ್ನಾಲಗೆಗೆ ಇಡೀ ಮನೆಯೇ ಸುಟ್ಟು ಕರಕಲಾಗಿದೆ. ಶೇಕಡಾ 85ರಷ್ಟು ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿವೆ. ಮಾತ್ರವಲ್ಲ, ಕುಟುಂಬದ ಏಳು ಮಂದಿ ಪವಾಡ ಸದೃಶ ಎಂಬಂತೆ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಅಪಾಯದಿಂದ ಪಾರಾದವರು:
ವೇಣುಗೋಪಾಲ್, ಅವರ ಪತ್ನಿ ರುಕ್ಮೀಣಿ, ಪುತ್ರರಾದ ಶ್ರೀವತ್ಸ, ಕೃಷ್ಣ, ಕೃಷ್ಣರ ಪತ್ನಿ ಅರ್ಪಿತಾ, ಮಾನ್ವಿತ್ ಚರಿಷ್ಮಾ ಪ್ರಾಣಾಪಾಯದಿಂದ ಪಾರಾದವರು. ನಗರದ ಬಸವೇಶ್ವರ ನಗರದ ಎರಡನೇ ಮುಖ್ಯರಸ್ತೆಯಲ್ಲಿರುವ ಪೈಪ್ ಅಂಗಡಿ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ ವೇಣುಗೋಪಾಲ್ ಅವರ ಮನೆಯೇ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದು ಭಸ್ಮವಾಗಿರುವುದು.
ಫ್ರಿಡ್ಜ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯವರನ್ನೆಲ್ಲಾ ಹೊರಗಡೆ ಕರೆದುಕೊಂಡು ಬಂದು ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳದವರಿಗೂ ಮಾಹಿತಿ ಮುಟ್ಟಿಸಿದ್ದಾರೆ. ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಮನೆ ಹೊತ್ತಿ ಉರಿದಿದ್ದು, ಘಟನೆ ನೆನಪಿಸಿಕೊಂಡರೆ ಭಯ ಆಗುತ್ತದೆ. ಇದೊಂದು ಕರಾಳ ನೆನಪು ಎಂದು ವೇಣುಗೋಪಾಲ್ ಅವರು ಸುದ್ದಿಕ್ಷಣ ಮೀಡಿಯಾಕ್ಕೆ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ:
ಬುಧವಾರ ರಾತ್ರಿ ಊಟ ಮಾಡಿ ಮನೆಯ ಏಳು ಮಂದಿ ಮಲಗಿದ್ದರು. ಆದರೆ ಬೆಳಿಗ್ಗೆ ಮೂರು ಗಂಟೆಗೆ ಇದ್ದಕ್ಕಿದ್ದಂತೆ ಶಬ್ದ ಬಂದಿದೆ. ಏನಾಗಿದೆ ಎಂದು ನೋಡಲು ವೇಣುಗೋಪಾಲ್ ಅವರು ನೋಡಿದ್ದಾರೆ. ಈ ವೇಳೆ ಪ್ರಿಡ್ಜ್ ನಿಂದ ಬೆಂಕಿ ಉರಿಯುತ್ತಿರುವುದು ಕಂಡು ಬಂದಿದೆ. ಕೂಡಲೇ ಮನೆಯಲ್ಲಿದ್ದ ರುಕ್ಮಿಣಿ, ಪುತ್ರರಾದ ಶ್ರೀವತ್ಸ, ಕೃಷ್ಣ, ಸೊಸೆ ಅರ್ಪಿತಾ, ಮೊಮ್ಮಕ್ಕಳಾದ ಮಾನ್ವಿತ್, ಚರಿಷ್ಮಾ ಅವರನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬಂದು
ಪ್ರಾಣ ಉಳಿಸಿದ್ದಾರೆ.
ಮನೆಯಲ್ಲಿ ಫ್ರಿಡ್ಜ್, ವಾಷಿಂಗ್ ಮಿಷಿನ್, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು, ಚೇರ್ ಗಳು, ಪೀಠೋಪಕರಣಗಳು ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಕಳೆದ ನಾಲ್ಕು ವರ್ಷ ಹಿಂದೆ ಕಟ್ಟಿದ್ದ ಮನೆಯು ಹೊತ್ತಿ ಉರಿಯುತ್ತಿರುವುದನ್ನು ಅಸಹಾಯಕತೆಯಿಂದ ನೋಡುತ್ತಾ ನಿಲ್ಲುವಂತಾಗಿದೆ. ಮನೆ ಧಗ ಧಗ ಎಂದು ಹೊತ್ತಿ ಉರಿದಿದ್ದು, ಶೇಕಡಾ 80ರಷ್ಟು ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ.
Leave a comment