Wednesday

26-03-2025 Vol 19

Kottureshwara Rathotsava 2023: ಕೊಟ್ಟೂರಿನಲ್ಲಿಂದು ಶ್ರೀಗುರು ಬಸವೇಶ್ವರ ಸ್ವಾಮಿ ರಥೋತ್ಸವದ ವೈಭವ: ಕಾಯಕ ಯೋಗಿಯ‌ ಮಹಿಮೆ ಸಾರುವ ವಿಶೇಷ ಲೇಖನ ಇಲ್ಲಿದೆ ಓದಿ

  • ವಿಶೇಷ ಲೇಖನ: ಉತ್ತಂಗಿ ಕೊಟ್ರೇಶ್

ಕಾಯಕ ಧರ್ಮ ಪಾಲಿಸಿ, ಶುದ್ಧ ಭಕ್ತಿಯಿಂದ ನಂಬಿ ಬರುವ ಭಕ್ತರನ್ನು ಕೈಹಿಡಿದು ಕಾಪಾಡುವ ಮಹಾಮಹಿಮ ಎಂದೇ ಹೆಸರಾದ ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿ ರಥೋತ್ಸವವು (Kottureshwara Rathotsava 2023) ಇಂದು (ಫೆ.16) ಗುರುವಾರ ಸಂಜೆ ಮೂಲಾ ನಕ್ಷತ್ರದಲ್ಲಿ ವೈಭವದಿಂದ ಜರುಗಲಿದೆ.

ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳು ಸೇರಿದಂತೆ ಅಕ್ಕ-ಪಕ್ಕದ ರಾಜ್ಯಗಳಲ್ಲಿ ನೆಲೆಸಿರುವ ಸ್ವಾಮಿಯ ಭಕ್ತರೂ ಆಗಮಿಸುತ್ತಾರೆ.

ಕೊಟ್ಟೂರೇಶ, ಬಸವರಾಜ, ನಂದಿಲಿಂಗ, ವೃಷಭರಾಜೇಂದ್ರ, ಗುರು ಬಸವೇಶ್ವರ, ಹುಚ್ಚೇಶ್ವರ, ಬಸವರಾಜೇಂದ್ರ ಮತ್ತಿತರೆ ಹೆಸರುಗಳಿಂದಲೂ ಕರೆಯಲ್ಪಡುವ ಸ್ವಾಮಿ, ಕೊಟ್ಟೂರಿನ ಹಿರೇಮಠ,‌ ತೊಟ್ಟಿಲು ಮಠ, ಗಚ್ಚಿನ ಮಠ, ಮೂರುಕಲ್ಲು ಮಠ ಸೇರಿದಂತೆ, ಮರಿ ಕೊಟ್ಟೂರೇಶನ ದೇವಸ್ಥಾನದಲ್ಲಿಯೂ ಪೂಜಿಸಲ್ಪಡುತ್ತಾನೆ. ಗಚ್ಚಿನ ಮಠದಲ್ಲಿ ಶ್ರೀ ಸ್ವಾಮಿಯ ಜೀವಂತ ಸಮಾಧಿ ಇದ್ದು, ಅಕ್ಬರ್ ಚಕ್ರವರ್ತಿ ನೀಡಿರುವರೆನ್ನಲಾದ ಒಂದು ಮಣಿ ಮಂಚ ಮತ್ತು ರತ್ನ ಖಚಿತ ಖಡ್ಗ ಕೂಡ ಇದೆ.

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಮಹಿಮೆ

ಈ ಮಠವನ್ನು ಸೋಮಶೇಖರ ಪಾಳೇಗಾರ ಎಂಬಾತ ಕಟ್ಟಿಸಿದ್ದಾನೆ ಎಂದು ಹೇಳಲಾಗುತ್ತದೆ. ಭೂ ಲೋಕದಲ್ಲಿ ಅನಾಚಾರ ಹೆಚ್ಚಾಗಿ, ದೈವ ಭಕ್ತಿ ಕಡಿಮೆ ಆಗಿರುವ ಸುದ್ದಿ ನಾರದಮುನಿಗಳಿಂದ ತಿಳಿದುಕೊಂಡ ಶ್ರೀ ಪರಮೇಶ್ವರನು, ಧರ್ಮ ರಕ್ಷಣೆಗಾಗಿ ಪಂಚ ಗಣಾಧೀಶರ ಜೊತೆಗೆ ತಾನೂ ಸಹ ಭೂಲೋಕಕ್ಕೆ ಬರುತ್ತಾನೆ.

ನಂದೀಶನಿಲ್ಲದೇ ಶಿವನಿಲ್ಲ, ಶಿವನಿಲ್ಲದೆ ನಂದೀಶನಿಲ್ಲ ಎನ್ನುವ ಹಾಗೆ ನಂದೀಶನಿಗೂ ಮೊದಲು ಶಿವನೇ ಬರುತ್ತಾನಂತೆ.

ಗಣಾಧೀಶರಲ್ಲಿ ಅಗ್ರಗಣ್ಯರಾದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಜೊತೆಗೆ ಹರಪನಹಳ್ಳಿಯ ಶ್ರೀ ಗುರು ಕೆಂಪೇಶ್ವರ ಸ್ವಾಮಿ, ಅರಸಿಕೆರೆ ಶ್ರೀ ಗುರು ಕೋಲ‌ ಶಾಂತೇಶ್ವರ ಸ್ವಾಮಿ, ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ, ಕೋಲಹಳ್ಳಿ ಶ್ರೀ ಗುರು ಮದ್ದಾನ ಸ್ವಾಮಿ ಸಹ ಭೂಲೋಕಕ್ಕೆ ಕಳುಹಿಸಲ್ಪಡುತ್ತಾರೆ ಎಂಬುದನ್ನು ಪುರಾಣಗಳು ತಿಳಿಸುತ್ತವೆ.

ಕೊಟ್ಟೂರೇಶ್ವರ ಸ್ವಾಮಿ ಮಹಿಮೆ‌ ದೊಡ್ಡದು

ಸತ್ಪುರಷ ಶಿವಯೋಗಿ ಬಸವರಾಜರು ಶಿಖಾಪುರಕ್ಕೆ ಬಂದಾಗ ಅವರ ವರ್ತನೆ ವಿಚಿತ್ರವಾಗಿತ್ತು. ಕೆಲವು ಪೋಕರಿಗಳು ಹುಚ್ಚನೆಂದು ತಮಾಷೆ ಮಾಡುತ್ತಾರೆ, ಕಲ್ಲು‌ ಎಸೆಯುತ್ತಾರೆ. ಆ ಕಲ್ಲುಗಳನ್ನೇ `ಲಿಂಗ’ವನ್ನಾಗಿಸಿ, ಸದಾ ಪರಶಿವನ ಧ್ಯಾನದಲ್ಲಿ ಇರುತ್ತಿದ್ದ ಅವರು ಸಜ್ಜನರ ರಕ್ಷಣೆ, ದುರ್ಜನರಿಗೆ ಶಿಕ್ಷೆ ಎನ್ನುವ ರೀತಿಯಲ್ಲಿ ಇರುತ್ತಾರೆ.

ಗುರು ಬಸವರಾಜರ ಈ ಲೀಲೆ ಕಂಡು, ಈತ ಸಾಮಾನ್ಯನಲ್ಲ ನಮ್ಮ ರಕ್ಷಣೆಗಾಗಿ ಬಂದಿರುವ ಪುಣ್ಯಮೂರ್ತಿ, ಸದಾಶಿವನ ಅವತಾರಿ ಎಂದು ಜನರು ಭಕ್ತಿಯಿಂದ ನಮಸ್ಕರಿಸಿ, ಪೂಜಿಸತೊಡಗುತ್ತಾರೆ.

ಕೊಟ್ಟೂರಿಗೆ ಮೊದಲು ಶಿಖಾಪುರ ಎಂಬ ಹೆಸರಿತ್ತು, ಶ್ರೀ ಗುರು ಕೊಟ್ಟೂರೇಶ್ವರರು ಇಲ್ಲಿಗೆ ಆಗಮಿಸಿ ಪವಾಡದ ರೀತಿಯಲ್ಲಿ ಸಹಾಯ ಮಾಡುತ್ತಿದ್ದುದರಿಂದಾಗಿ, ಶಿಖಾಪುರಕ್ಕೆ `ಕೊಡುವ’ ಊರು `ಕೊಟ್ಟೂರು’ ಎಂಬ ಹೆಸರು ಬಂದಿತಂತೆ.

ಪರಶಿವನ ಶಕ್ತಿ ಸ್ವರೂಪನಾದ ಶ್ರೀ ಬಸವರಾಜ, ನಂಬಿಯಕ್ಕನ ಆಶ್ರಯಕ್ಕೆ ಬಂದು, ಕಾಯಕ ಧರ್ಮ ಪಾಲಿಸುತ್ತಾನೆ. ದನಕಾಯಲು ಹೋಗಿ ಭೋರ್ಗರೆದ ನೀರಿನಲ್ಲಿ ಏಳು ದಿನ ಕಳೆದು ಜೀವಂತ ಬಂದದ್ದು, ಮೂರುಕಲ್ಲು ಮಠದಲ್ಲಿ ಬೆಂಕಿ ಪವಾಡ ಮೆರೆದದ್ದು ಭಕ್ತರನ್ನು ಆಶ್ಚರ್ಯಚಕಿತರಾಗುವಂತೆ ಮಾಡುತ್ತದೆ.

ಕೊಟ್ಟೂರ ಮೇಲೆ ದಾಳಿ ನಡೆಸುವ ವೈರಿ ಪಡೆಗಳ ವಿರುದ್ಧಧರ್ಮ ಯುದ್ಧಮಾಡಿ ಜಯಿಸುತ್ತಾರೆ. ಧರ್ಮದ ಮುಖ್ಯ ತತ್ವಗಳನ್ನು ಜನರು ತಮ್ಮ‌ ಜೀವನದಲ್ಲಿ ಅಳವಡಿ ಸಿಕೊಂಡು ನಡೆಯುವಂತೆ ಬೋಧಿಸುವ ಮೊದಲು, ಅವುಗಳನ್ನು ಸ್ವತಃ ತಾವೇ ಆಚರಿಸಿ ತೋರಿಸಲು ಅನೇಕ ಲೀಲಾ ವಿನೋದಗಳನ್ನು ಮಾಡುತ್ತಾರೆ. ಹಾಗಾಗಿ ಹುಚ್ಚನ ಹಾಗೆ, ಶಿವಭಕ್ತನ ರೂಪದಲ್ಲಿ, ಹಠವಾದಿಯಂತೆ ನಡೆದುಕೊಳ್ಳುತ್ತಾರೆ.

ಇದನ್ನು ಓದಿ: ದಾವಣಗೆರೆ ಎಕ್ಸ್‌ಪ್ರೆಸ್‌ ವಿನಯ್

ಕೈಲಾಸಕ್ಕೆ ತೆರಳುವ ಆತ್ಮಜ್ಯೋತಿ ಭೂಲೋಕದಲ್ಲಿ ಶಿವನು ವಹಿಸಿದ ಕಾರ್ಯ ಪೂರ್ಣವಾಗುತ್ತಲೇ, ಒಮ್ಮೆ ಶ್ರೀ ಗುರು ಬಸವರಾಜರ ಕರಂಡಕದಲ್ಲಿನ ವಿಭೂತಿ ಮಾಯವಾಗಿ ಹೋಗುತ್ತದೆ. ಇದು ತಮ್ಮ ಅಂತ್ಯಕಾಲದ ಸೂಚನೆ ಎಂದು ಅರಿತ ಅವರು ಗಚ್ಚಿನ ಮಠದ ಸ್ಥಳದಲ್ಲಿ ತ್ರಿಕೋಣ ಸಮಾಧಿ ನಿರ್ಮಿಸಿ, ಪುಷ್ಪ, ಸಾರಣಿ, ರಂಗವಲ್ಯಾದಿಗಳಿಂದ ಅಲಂಕರಿಸಿ ಪೂಜಿಸಿ ಸಿದ್ಧ ಮಾಡಿಕೊಳ್ಳುತ್ತಾರೆ. ನಂತರ ಸ್ನಾನ, ಪೂಜೆ ಮಾಡಿ ಶಿವಲಾಂಚನ ಧರಿಸಿ ಯೋಗ ಸಮಾಧಿಯಲ್ಲಿ, ಪದ್ಮಾಸನದಿಂದ ಕುಂಭಕ ಪ್ರಾಣಾಯಾಮ ಮಾಡಿ ಇಷ್ಟಲಿಂಗದಲ್ಲಿ ದೃಷ್ಟಿಯಿರಿಸಿ ಲಿಂಗೈಕ್ಯರಾಗುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಅವರ ಆತ್ಮಜ್ಯೋತಿ ಬ್ರಹ್ಮರಂಧ್ರದಿಂದ ಕೈಲಾಸಕ್ಕೆ ತೆರಳುತ್ತದೆ.

ಅವರ ಆ ದಿವ್ಯ ಜೀವನದ ಸಂಕೇತವಾಗಿ ಮಾಘ ಬಹುಳ ದಶಮಿಗೆ ಶ್ರೀ ಗುರುವಿನ `ರಥೋತ್ಸವ’ ಅಂದಿನಿಂದಲೂ ಅನೂಚಾನವಾಗಿ ನಡೆದುಕೊಂಡು ಬರಲಾಗುತ್ತಿದೆ.

ಹಿರೇಮಠದಲ್ಲಿರುವ ಮೂಲ ವಿಗ್ರಹವೇ ರಥೋತ್ಸವದಲ್ಲಿ ವಿರಾಜಿಸುತ್ತದೆ. ರಥಕ್ಕೆ ಮೊದಲು ಹರಿಜನ ಮಹಿಳೆ ಕಳಸದಾರತಿ ಬೆಳಗುವುದು ವಿಶೇಷ. ಸ್ವಾಮಿಗೆ ಆಕಳ ಗಿಣ್ಣದ ನೈವೇದ್ಯ ಮಾಡಲಾಗುತ್ತದೆ. ಗುರುವಿನ ಕೃಪೆಯಿಂದ ರಥೋತ್ಸವ ಸಂದರ್ಭದಲ್ಲಿ ಯಾವುದಾದರೊಂದು ಆಕಳು ಕರುವನ್ನು ಹಾಕಿರುತ್ತದಂತೆ.

ಶ್ರೀ ಸ್ವಾಮಿಗೆ ಭಕ್ತಿಯಿಂದ, ತ್ರಿಕರಣ ಪೂರ್ವಕವಾಗಿ ನಡೆದುಕೊಳ್ಳುವ ಭಕ್ತರಿಗೆ ರಕ್ಷಕನಾಗಿ ಕಾಯುತ್ತಾನೆ. ಆಕಾಂಕ್ಷೆಗಳನ್ನು ಈಡೇರಿಸುತ್ತಾನೆ. ದುರ್ವಿಧಿ ಮತ್ತು ದುಷ್ಟಗ್ರಹಚಾರವನ್ನು ಹೋಗಲಾಡಿಸಿ, ಆಯುರಾರೋಗ್ಯ ಭಾಗ್ಯಗಳನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಲಕ್ಷಾಂತರ ಭಕ್ತರ ಮನದಾಳದಲ್ಲಿ ಬೇರೂರಿದೆ. ಅದಕ್ಕೆ ಆತನ ರಥೋತ್ಸವಕ್ಕೆ ಸೇರುವ ಜನಸಾಗರವೇ ಸಾಕ್ಷಿ.

ಈ ಹಿಂದೆ ಬಳ್ಳಾರಿ ಜಿಲ್ಲೆಗೆ ಸೇರಿದ್ದ ಕೊಟ್ಟೂರು, ಜಿಲ್ಲಾ ಪುನರ್ವಿಂಗಡಣೆಯಿಂದಾಗಿ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಈಗ ಒಳಪಟ್ಟಿದೆ. ಈಗಾಗಲೇ ಜಾತ್ರೆಯ ಸಡಗರ-ಸಂಭ್ರಮ ಕೊಟ್ಟೂರ ತುಂಬೆಲ್ಲ ಹರಡಿದೆ. ಜಾತ್ರಾ ಸಿದ್ಧತೆಗಳು ಭರದಿಂದ ಸಾಗಿವೆ. ಧಾರ್ಮಿಕ ವಿಧಿ-ವಿಧಾನಗಳು ಪದ್ಧತಿಯಂತೆಯೇ ಸಾಗಿವೆ.

ಕೊಟ್ಟೂರ ದೊರೆಯೇ ನಿನಗಾರು ಸರಿಯೇ

ಗುರುವಾರ ಕೊಟ್ಟೂರಿನಲ್ಲಿ ಎಲ್ಲಿ ನೋಡಿದರಲ್ಲಿ ಜನವೋ ಜನ. ಕಡುಬಿಸಿಲಿನ ಪರಿವೆಯೇ ಇಲ್ಲದ ಹಾಗೆ, ತೇರು ಹರಿಯುವುದನ್ನೇ ಆತುರದಿಂದ ಕಾಯುವ ಭಕ್ತಸ್ತೋಮ. ಮೂಲಾ ನಕ್ಷತ್ರದಲ್ಲಿ ತೇರು ಎಳೆಯುತ್ತಲೇ, ಆ ಸಂಭ್ರಮ ಕಣ್ತುಂಬಿಕೊಳ್ಳುವುದರ ಜೊತೆಗೆ ರಥಕ್ಕೆ ಬಾಳೆ ಹಣ್ಣುಗಳನ್ನು ಎಸೆದು ಗುರಿ ತಲುಪಿಸಿ, ಗುರುವಿನ ಆಶೀರ್ವಾದ ದೊರೆತ, ಧನ್ಯತಾ ಭಾವ ಹೊಂದುತ್ತಾರೆ. ಕಾಲು ನೋವಿನ ಮಧ್ಯೆಯೂ ಪಾದಯಾತ್ರೆ ನಡೆಸಿದ ಭಕ್ತರು ಜೈಕಾರ ಹಾಕುತ್ತಾರೆ. ಕೈಮುಗಿದು ಕಾಪಾಡು ಗುರುವೇ ಎನ್ನುತ್ತಾರೆ.

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಹಿರೇಮಠ ಈಗ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇನ್ನು ತೊಟ್ಟಿಲು ಮಠದಲ್ಲಿರುವ ತೊಟ್ಟಿಲನ್ನು ಮಕ್ಕಳಾಗದವರು ತೂಗಿದರೆ ಮಕ್ಕಳಾಗುತ್ತವೆ ಎಂಬ ಪ್ರತೀತಿ ಇದೆ. ಹೊಸದಾಗಿ ಮದುವೆಯಾದ ಜೋಡಿಗಳು, ಬಹಳ ವರ್ಷಗಳಿಂದ ಮಕ್ಕಳಾಗದವರು ದೇವರ ದರ್ಶನ ಪಡೆದು ತೊಟ್ಟಿಲು ತೂಗುತ್ತಾರೆ.

ಶಿಖಾಪುರ ದೇಗುಲ ಆವರಿಸಿದ ಕೊಟ್ಟೂರೇಶ

ಕೊಟ್ಟೂರೇಶ್ವರರು ಒಮ್ಮೆ ದೇಶ ಸಂಚಾರ ಮಾಡುತ್ತಾ ಶಿಖಾಪುರಕ್ಕೆ ಬಂದಾಗ ರಾತ್ರಿ ಆಗಿರುತ್ತದಂತೆ, ತಮಗೆ ತಂಗಲು ಸ್ಥಳ ನೀಡುವಂತೆ ಶ್ರೀ ವೀರಭದ್ರೇಶ್ವರ ಸ್ವಾಮಿ ಬಳಿ ಕೇಳಿದಾಗ ಅದಕ್ಕೆ ಒಪ್ಪಿದ ವೀರಭದ್ರೇಶ್ವರರು ತಮ್ಮ ದೇವಸ್ಥಾನದಲ್ಲಿ ಮಲಗಲು ಸ್ಥಳವನ್ನು ನೀಡುತ್ತಾರೆ. ಬೆಳಗಾಗುವ ಹೊತ್ತಿಗೆ ಸಂಪೂರ್ಣ ಇಡಿ ದೇಗುಲವನ್ನೇ ಆವರಿಸಿದ ಕೊಟ್ಟೂರೇಶ್ವರರು ಶ್ರೀ ವೀರಭದ್ರ ಸ್ವಾಮಿಗೆ ಸ್ಥಳವೇ ಇಲ್ಲದಂತೆ ಮಾಡಿಬಿಡುತ್ತಾರಂತೆ.

ಆಗ ವೀರಭದ್ರೇಶ್ವರ ಸ್ವಾಮಿ ಈ ಕುರಿತು ಕೇಳಿದಾಗ, ಗಣಾಧೀಶ ಕೊಟ್ಟೂರೇಶ್ವರ, `ನಿಮ್ಮ ಸ್ಥಳವನ್ನು ನನಗೆ ನೀಡಿ, ನೀವು ಕೊಡದಗುಡ್ಡ ಕ್ಷೇತ್ರಕ್ಕೆ ಹೋಗಿ ನೆಲೆಸಿರಿ. ಅಲ್ಲದೇ ಆ ಸ್ಥಳವನ್ನು ಮತ್ತೆ ನೀವು ಯಾರಿಗೂ ಕೊಡಬಾರದು. ಆ ಕ್ಷೇತ್ರವು `ಕೊಡದಗುಡ್ಡ’ದ ಶ್ರೀ ವೀರಭದ್ರೇಶ್ವರ ಸ್ವಾಮಿ ಪುಣ್ಯಕ್ಷೇತ್ರವಾಗಿ ಪ್ರಖ್ಯಾತವಾಗಲಿ. ನೀವು ನನಗೆ ಕೊಟ್ಟ ಈ `ಶಿಖಾಪುರ’ ಇನ್ನು ಮುಂದೆ `ಕೊಟ್ಟೂರು’ ಎಂದು ಹೆಸರಾಗಲಿದೆ’ ಎಂದರಂತೆ.

ಸದಾ ಪೂಜಿಸಲ್ಪಡುವ ಶ್ರೀ ಗುರು

ಶ್ರಾವಣ ಮಾಸದಲ್ಲಿ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ ಬಹು ವಿಜೃಂಭಣೆಯಿಂದ ಜರುಗುವುದಲ್ಲದೇ, ಪ್ರತಿ ಅಮಾವಾಸ್ಯೆಯಲ್ಲಿ ಸಹಸ್ರಾರು ಜನ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಹೀಗೆ ಸದಾ ಜನರಿಂದ ಪೂಜಿಸಲ್ಪಡುವ ಶ್ರೀ ಗುರು ಕೊಟ್ಟೂರೇಶ್ವರರ ಕಾರಣದಿಂದಾಗಿ ಕೊಟ್ಟೂರು ಪಟ್ಟಣವು ಧಾರ್ಮಿಕ ಮತ್ತು ವಾಣಿಜ್ಯ ಕೇಂದ್ರವಾಗಿ ಕಂಗೊಳಿಸತೊಡಗಿದೆ. ಭಕ್ತರು ಮತ್ತು ವ್ಯಾಪಾರ ವಹಿವಾಟು ಮಾಡುವ ಜನರ ಬಹುದಿನದ ಬೇಡಿಕೆಯಿಂದಾಗಿ ರೈಲ್ವೇಇಲಾಖೆಯೂ ಸಹ ಈಗಾಗಲೇ ಕೆಲವು ವರ್ಷಗಳಿಂದ ಹರಿಹರ-ಕೊಟ್ಟೂರು ಮಾರ್ಗದಲ್ಲಿ ರೈಲನ್ನು ಓಡಿಸುತ್ತಿದೆ. ದಾವಣಗೆರೆ ಜನರೂ ಸಹ ಈ ಸೌಲಭ್ಯ ಬಳಸಿಕೊಳ್ಳುತ್ತಿದ್ದಾರೆ.

ನಾಡಿನೆಲ್ಲೆಡೆ ಶ್ರೀ ಗುರುವಿನ ದೇಗುಲ-ಮಠಗಳು

ಶ್ರೀ ಕೊಟ್ಟೂರು ಬಸವೇಶ್ವರ ಸ್ವಾಮಿ ಕೊಟ್ಟೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಅನೇಕ ಕಡೆ ಅವರ ದೇವಸ್ಥಾನಗಳು ನಿರ್ಮಾಣವಾಗಿವೆ. ಪಕ್ಕದ ಉಜ್ಜಯಿನಿ, ಅಂಬಳಿ, ಗುಣಸಾಗರ, ಕೆ.ಗಜಾಪುರ, ಕುಪ್ಪಿನಕೆರೆ, ಕೋಗಳಿ, ಚಿರಿಬಿ ಗ್ರಾಮಗಳಲ್ಲಿ ಇವೆ.

ಮುಖ್ಯವಾಗಿ ಬಹಳಷ್ಟು ಭಕ್ತರನ್ನು ಹೊಂದಿರುವ ದಾವಣಗೆರೆಯಲ್ಲಿನ ಹಳೇಪೇಟೆ, ಮಾಗಾನಹಳ್ಳಿ ರಸ್ತೆ, ಮತ್ತು ಕೊಟ್ಟೂರೇಶ್ವರ ಬಡಾವಣೆಯಲ್ಲಿಯೂ ದೇವಸ್ಥಾನಗಳಿವೆ. ಕೋಲಾರದ ಕೊಟ್ಟೂರು ಗ್ರಾಮದ ಬಳಿ ಇರುವ ಬಸವಾಪುರ, ಚಾಮರಾಜ ನಗರ, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ, ಮೈಸೂರು ಜಿಲ್ಲೆಯ ಅರಸಿಕೆರೆ, ಕಲ್ಬುರ್ಗಿಯ ಸೇಡಂ ಗ್ರಾಮದಲ್ಲಿ, ರಾಣೇಬೆನ್ನೂರು, ಐರಣಿ, ಕುಂದೂರು, ಹೊಸಪೇಟೆ, ಗಂಗಾವತಿ, ಹೂವಿನಹಡಗಲಿ, ಉತ್ತಂಗಿ, ಶಿವಲಿಂಗನಹಳ್ಳಿ, ನವಿಲೆ, ಬುದನೂರು ಕೂಲಹಳ್ಳಿ, ಹರ್ಲಾಪುರ ತಂಬ್ರಹಳ್ಳಿ, ಶಿಕಾರಿಪುರದ ನಿಂಬೇಗೊಂದಿ ಮತ್ತಿತರೆ ಕಡೆಗಳಲ್ಲಿಯೂಶ್ರೀಗುರು ಕೊಟ್ಟೂರೇಶ್ವರರ ದೇವಸ್ಥಾನ ಮತ್ತು ಮಠಗಳು ಇರುತ್ತವೆ.

ಕೊಟ್ಟೂರು ರಥೋತ್ಸವದ ಸಂಭ್ರಮವನ್ನು ದಾವಣಗೆರೆಯಲ್ಲಿ ನೋಡಬೇಕು..!
ಕೊಟ್ಟೂರಿನಲ್ಲಿ ರಥೋತ್ಸವ ಜರುಗಿದರೆ, ಅದರ ಸಂಭ್ರಮ ದಾವಣಗೆರೆಯಲ್ಲಿ ನೋಡಬೇಕು. ಇಲ್ಲಿ ವರ್ಷದಿಂದ ವರ್ಷಕ್ಕೆ ಪಾದಯಾತ್ರಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಹರೆಯದ ಯುವಕ-ಯುವತಿಯರಿಂದ ಹಿಡಿದು ವೃದ್ದರೂ ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳು ತ್ತಾರೆ. ಇಲ್ಲಿನ ಶ್ರೀ ಗುರು ಕೊಟ್ಟೂರು ಬಸವರಾಜೇಂದ್ರ ಪಾದಯಾತ್ರೆ ಟ್ರಸ್ಟ್‌ ಕಳೆದ 44 ವರ್ಷಗಳಿಂದಲೂ ಪಾದಯಾತ್ರೆ ಕಾರ್ಯಕ್ರಮವನ್ನು ‘ನಡೆಸಿಕೊಂಡು ಬರುತ್ತಿದೆ. ಮಠ, ಮಾನ್ಯರಿಂದ ಆಶೀರ್ವಾದ ಪಡೆದು ಪಾದಯಾತ್ರಿಗಳು ದೇವರ ಸ್ಮರಣೆ, ಭಜನೆ ಮಾಡುತ್ತಾ ಕೊಟ್ಟೂರಿನತ್ತ ಹೆಜ್ಜೆ ಹಾಕುತ್ತಾರೆ. ಪಾದಯಾತ್ರಿಗಳಿಗೆ ಬೀಳ್ಕೊಡುವ ಈ ಸಂದರ್ಭವೇ ಜಾತ್ರೆಯಂತಾಗಿರುತ್ತದೆ. ಬಹಳಷ್ಟು ಭಕ್ತರು ಯಾತ್ರಿಗಳಿಗೆ ಹಣ್ಣು ಹಂಚುತ್ತಾರೆ, ಬಿಸ್ಕತ್, ನೀರಿನ ಬಾಟಲು, ಚಿತ್ರಾನ್ನ, ಉಪ್ಪಿಟ್ಟು ಅಷ್ಟೇ ಏಕೆ ಕೆಲವು ಭಕ್ತರು ರಸ್ತೆಯಲ್ಲಿಯೇ ಹಂಚನ್ನಿಟ್ಟು ಬಿಸಿ ಬಿಸಿ ದೋಸೆಯನ್ನು ಹಾಕಿಸಿ ಯಾತ್ರಿಗಳಿಗೆ ಕೊಡುತ್ತಾರೆ. ಪಾದಯಾತ್ರಿಗಳು ಸಾಗುವ ಕೊಟ್ಟೂರು ಮಾರ್ಗ ಮಧ್ಯೆ ಅಲ್ಲಲ್ಲಿ ಅಯಾಯ ಗ್ರಾಮದ ಜನರು ನೀರು, ಮಜ್ಜಿಗೆ, ಶರಬತ್ತು, ಹಣ್ಣು-ಹಂಪಲು, ಉಪಹಾರದ ವ್ಯವಸ್ಥೆ ಮಾಡಿದರೆ, ವೈದ್ಯರು, ನರ್ಸ್‌ಗಳು ಮತ್ತು ಸೇವಾಕಾರ್ಯಕರ್ತರ ತಂಡಗಳು ಪಾದಯಾತ್ರಿಗಳ ಸೇವೆಯಲ್ಲಿ ನಿರತವಾಗಿರುತ್ತವೆ. ಇದನ್ನು ಅವರು ದೇವರ ಸೇವೆಯೆಂದೇ ಭಾವಿಸುತ್ತಾರೆ.

ಕೃಪೆ: ಜನತಾವಾಣಿ

 

Davanagere Live

Leave a Reply

Your email address will not be published. Required fields are marked *